ಸಿಂಗಪೂರವು ಈಗಿನ ಬೆಂಗಳೂರಿಗಿಂತ ಚಿಕ್ಕದಾದ, ಒಂದು ಪುಟ್ಟ ದ್ವೀಪ ರಾಷ್ಟ್ರ. ಇದರ ವಿಸ್ತಾರ ಉತ್ತರದಿಂದ ದಕ್ಷಿಣಕ್ಕೆ ಸುಮಾರು ೨೫ ಕಿ.ಮೀ. ಹಾಗೂ ಪಶ್ಚಿಮದಿಂದ ಪೂರ್ವಕ್ಕೆ ೪೦ ಕಿ.ಮೀ. ೧೯೬೫ರಲ್ಲಿ ಮಲೇಶಿಯಾದಿಂದ ಪ್ರತ್ಯೇಕಗೊಂಡ ಸಿಂಗಪುರದ ಇಂದಿನ ಜನಸಂಖ್ಯೆ ಸುಮಾರು * ೪.೫ ಮಿಲಿಯನ್. ಆದಿಯಲ್ಲಿ ಸಿಂಗಪುರವು ಒಂದು ಬೆಸ್ತರ ಹಳ್ಳಿಯಾಗಿತ್ತು. ತದನಂತರ ಇಲ್ಲಿಗೆ ಬಂದ ಚೀನೀಯರು, ಮಲಯರು ಹಾಗೂ ಭಾರತೀಯರು ಸಿಂಗಪುರವನ್ನು ಒಂದು ಆಧುನಿಕ ಪಟ್ಟಣವನ್ನಾಗಿ ಮಾರ್ಪಡಿಸಿದರು.
ಸಿಂಗಪುರವು ಸರ್ವಧರ್ಮ ಸಮನ್ವತೆಯ ಸಮಾಜವನ್ನು ಸಾರುತ್ತಿದ್ದು ಇಲ್ಲಿ ವಿವಿಧ ಧರ್ಮದ ಜನರು ಸಹಬಾಳ್ವೆ ಮಾಡುವುದನ್ನು ಕಾಣಬಹುದು. ಇಂಗ್ಲೀಷ್, ಮಲಯ್, ಮ್ಯಾಂಡರಿನ್, ಮಲಯ್ ಹಾಗು ತಮಿಳು ಸಿಂಗಪುರದ ಅಧಿಕೃತ ಭಾಷೆಗಳಾಗಿದ್ದರೂ ಇಂಗ್ಲೀಷ್ ಭಾಷೆ ಸಾರ್ವಜನಿಕ ಮಾನ್ಯತೆ ಪಡೆದಿದೆ. ಇಲ್ಲಿಯ ಶಾಲೆಗಳಲ್ಲಿ ಮಕ್ಕಳು ಖಡ್ಡಾಯವಾಗಿ ತಮ್ಮ ಮಾತೃಭಾಷೆಯನ್ನು ಪ್ರೌಢಶಾಲೆ ಯಾ ’ಎ’ಹಂತದವರೆಗೆ ಒಂದು ಪ್ರಮುಖ ವಿಷಯವಾಗಿ ಕಲಿಯುತ್ತಾರೆ. ಕೆಲವು ವರ್ಷಗಳ ಹಿಂದೆ ಭಾರತೀಯ ಭಾಶೆಗಳಾದ ಹಿಂದಿ, ಪಂಜಾಬಿ, ಗುಜರಾತಿ, ಉರ್ದು ಹಾಗೂ ಬೆಂಗಾಲೀ ಭಾಷೆಗಳನ್ನು ಮಾತೃಭಾಷೆಯಾಗಿ ಪರಿಗಣಿಸಿದ್ದಾರೆ. ಮುಂದೊಂದು ದಿನ ಇಲ್ಲಿ ಕನ್ನಡ ಭಾಷೆಗೂ ಇದೇ ಸ್ಥಾನ ದೊರಕಲೆಂದು ನಮ್ಮೆಲ್ಲರ ಆಶಯ.
ಇನ್ನು ಸಿಂಗಪುರದ ಕನ್ನಡಿಗರ ಬಗ್ಗೆ ಬರೋಣ. ಪ್ರಾಯಶಃ ದ್ವಿತೀಯ ಜಾಗತಿಕ ಮಹಾಯುದ್ದದ ತರುವಾಯ ಇಲ್ಲಿಗೆ ಕಾಲಿಟ್ಟ ಇಂಗ್ಲೀಷ್ ಸಈನ್ಯದಲ್ಲಿದ್ದ ಜನರಲ್ ತಿಮ್ಮಯ್ಯನವರೇ ಮೊದಲ ಕನ್ನಡಿಗರೆಂದು ಹೇಳಬಬುದೇನೋ!ಸಿಂಗಪುರಕ್ಕೆ ೭೦ರ ದಶಕದಲ್ಲಿ ಬೆರಳೆಣಿಕೆಯ ಕನ್ನಡಿಗರು ಬಂದರೂ ೯೦ರ ದಶಕದಲ್ಲಿ ನಡೆದ ವಿದ್ಯುನ್ಮಾನ ಹಾಗೂ ಗಣಕ ಕ್ಷೇತ್ರಗಳಲ್ಲಾದ ಕ್ರಾಮ್ತಿಯಿಂದ ಕನ್ನಡಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಯಿತು. ಸಿಂಗಪುರ - ಬೆಂಗಳೂರಿನ ನಡುವೆ ನೇರ ವಿಮಾನಯಾನ ಆರಂಭವಾದಾಗಿನಿಂದ ಈ ಎರಡು ತಾಂತ್ರಿಕ ನಗರಗಳ ನಡುವೆ ಓಡಾಡುವ ವೃತ್ತಿನಿರತರ ಹಾಗೂ ಪ್ರವಾಸಿಗರಿಗೆ ಸಂಚಾರ ಸುಗಮವಾಯಿತು. ಈಗಂತೂ ಕಡಿಮೆ ದರದ ವಿಮಾನಯಾನ(Budget Airlines)ದ ಸೌಲಭ್ಯವಿರುವುದರಿಂದ ಜನಸಾಮಾನ್ಯ ಕನ್ನಡಿಗರಿಗೂ ಸಿಂಗಪುರದ ಪ್ರವಾಸ ಸಾಧ್ಯವಾಗಿದೆ.
|